ಪುತ್ತೂರು: ಸಮಾಜದ ಸರ್ವತೋಮುಕ ಬೆಳವಣಿಗೆಯಲ್ಲಿ ಕಾನೂನು ವಿದ್ಯಾರ್ಥಿಯ ಪಾತ್ರ ಮಹತ್ವದ್ದು, ಹಾಗು ವಿದ್ಯಾರ್ಥಿ ದೆಸೆಯಲ್ಲಿಯೇ ಈ ಕಾರ್ಯಕ್ಕೆ ಕಂಕಣಬದ್ಧರಾಗಬೇಕು. ವಿದ್ಯಾರ್ಥಿಗಳು ಹೆಚ್ಚಿನ ಜವಾಬ್ಧಾರಿಯಿಂದ ಕಾರ್ಯ ನಿರ್ವಹಿಸಬೇಕು. ತನ್ಮೂಲಕ ಕಾಲೇಜಿನ ಘನತೆ ಗೌರವಗಳನ್ನು ಎತ್ತಿಹಿಡಿಯಬೇಕು. ವಿದ್ಯಾರ್ಥಿಗಳಲ್ಲಿ ಸ್ವಯಂಶಿಸ್ತು ಅಗತ್ಯ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್. ಆಚಾರ್ಯ ಹೇಳಿದರು. ಅವರು ಕಾಲೇಜಿನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಭಾರ ಪ್ರಾಂಶುಪಾಲೆ ಜ್ಯೋತ್ಸ್ನಾ ಮಾತನಾಡಿ ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಾಲೇಜಿನಲ್ಲಿ ರ್ಯಾಗಿಂಗ್ ಮುಕ್ತ ವಾತಾವರಣವಿದ್ದು ಅತ್ಯಂತ ಆಪ್ತ ಪರಿಸರದಲ್ಲಿ ಅಧ್ಯಯನ ನಡೆಸಲು ಸಾಧ್ಯ. ತಮ್ಮ ಅಧ್ಯಯನದ ನಂತರ ಸಮಾಜಕ್ಕೆ ಪದಾರ್ಪಣೆಗೈಯುವಾಗಲೇ ವಿದ್ಯಾರ್ಥಿಗಳು ಯುವ ನ್ಯಾಯವಾದಿಗಳಾಗಿ ಆತ್ಮವಿಶ್ವಾಸದಿಂದ ಮುನ್ನುಗ್ಗುವಂತಾಗಭೇಕು ಎಂದು ನುಡಿದರು.
ಭಾರತ ಮಾತಾ ಪೂಜದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹೊಸ ವಿದ್ಯಾರ್ಥಿಗಳನ್ನು ಉಪನ್ಯಾಸಕರು ಹೂವನ್ನು ನೀಡಿ ಬರಮಾಡಿಕೊಳ್ಳಲಾಯಿತು ಹಾಗೂ ಹೊಸದಾಗಿ ನೇಮಕಗೊಂಡ ಉಪನ್ಯಾಸಕರಾದ ರಾಜೇಂದ್ರಪ್ರಸಾದ್, ಹರೀಶ ರಾವ್, ಉದಯಕುಮಾರ್ ಇವರನ್ನು ವಿದ್ಯಾರ್ಥಿಗಳು ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೇಯಾ ಪ್ರಾರ್ಥಿಸಿದರು. ವಿದ್ಯಾರ್ಥಿ ರಾಜೇಶ್ ಸ್ವಾಗತಿಸಿದರು. ವಿದ್ಯಾರ್ಥಿ ರೋಶನ್ ವಂದಿಸಿದರು. ವಿದ್ಯಾರ್ಥಿ ಗೌತಮ್ ನಿರೂಪಿಸಿದರು.